Wednesday, June 11, 2008

ಬಿಡುಗಡೆ

ಗಾರ್ಮೆಂಟ್ಸ್ ನಿಂದ ಆಗ ತಾನೆ ಬಂದು ಉಸ್ ಅಂತ ಕೂತವಳಿಗೆ ಮಗಳ ನೆನಪು ಬಂತು ಕೂಡಲೆ ಪಕ್ಕದ ಮನೆಗೆ ಹೋದಿ ಕರೆ ತಂದಳು.ಗಂಡ ಇನ್ನೂ ಬಂದಿರಲಿಲ್ಲ .ಮಗಳಿಗೆ ಕಾಫಿ ಕೊಟ್ಟು ತಾನುಹಾಲಿಲ್ಲದ ಕಾಫಿ ಹೀರುತ್ತಿದ್ದಂತೆ ಆ ಕಾಫಿಯ ಕಪ್ಪೆಲ್ಲ ತನ್ನ ಬದುಕಲ್ಲೆ ತುಂಬಿದಂತೆ ಭಾಸವಾಗತೊಡಗಿತು.

ಬದುಕಿನ ಅನಿಶ್ಚಿತತೆ ಕಾಡತೊಡಗಿತು

ಅವಳಿಗೆ ಗೊತ್ತಿತು ಹೀಗೆ ಆಗುತ್ತದೆ ಎಂದು

ಅವಳ ಅಮ್ಮ ಮನೆ ಚಾಕರಿ ಮಾಡುತಾ ಇವಳನ್ನೂ ಅದೇ ಚಾಕರಿಗೆ ಹಾಕಿ ಬದುಕಲ್ಲಿ ಓದಿಗೆ ಅವಕಾಶವಿಲ್ಲದಂತೆ ಮಾಡಿದಳು

ಹಾಗೆ ಚಾಕ್ರಿಗೆ ಹೋಗುತ್ತಲೆ ಸಿದ್ದನ ಪರಿಚಯವಾಗಿ ಪ್ರೇಮ ಪ್ರೀತಿ ಶುರುವಾಗಿ

ಊರಿನಿಂದ ಓಡಿ ಬಂದು ಬೆಂಗಳೂರಿಗೆ ನೆಲೆಸಿದರು.

ಮದುವೆ ಎಂಬ ಶಾಸ್ತ್ರವೂ ನಡೆಯಿತು.

ಹೊಟ್ಟೆಯಲ್ಲಿ ಮಗಳು ಇದ್ದಾಗಲೆ ಅವಳಿಗೆ ಬಡತನದ ಬೆಂಕಿ ಮುಂಚಿಗಿಂತಲೂ ತೀಕ್ಷ್ಣವಾಗಿ ಸುಡತೊಡಗಿತು

ಅಲ್ಲಿಯಾದರೆ ಅಮ್ಮ ಇವಳ ಸಮಕೂ ದುಡಿಯುತಿದ್ದಳು

ಆದರೆ ಇಲ್ಲಿ ಸಿದ್ದ ಕೆಲಸಕ್ಕೆ ಹೋಗೊ ಮಾತೆ ಆಡಲಿಲ್ಲ

ಕೆಲಸಕ್ಕೆ ಹೋಗು ಎಂದು ಕೇಳಿದರೆ ಹಿಡಿದು ಹಿಗ್ಗಾ ಮುಗ್ಗ ಹೊಡೆಯುತ್ತಿದ್ದ . ಕುಡಿತ ಇಲ್ಲದಿದ್ದರೆ ಬದುಕೇ ಇಲ್ಲ ಅವನಿಗೆ.

ಹಾಗಾಗಿ ಗಾರ್ಮೆಂಟ್ಸ್ ಒಂದರಲಿ ಕೆಲಸಕ್ಕೆ ಹೆಲ್ಪರ್ ಅಗಿ ಸೇರಿದಳು.

ಇವಳು ದುಡಿದು ತಂದ ಹಣವನ್ನೆಲ್ಲಾ ಕುಡಿತಕ್ಕೆ ಪೋಲು ಮಾಡುತ್ತಿದ್ದ.

ಮಗಳು ಹುಟ್ಟಿದ ನಂತರ ಮತ್ತೆ ಅದೇ ಬದುಕು.

ಪಕ್ಕದ ಮನೆಯಲ್ಲಿ ಮಗಳನ್ನು ಬಿಟ್ಟು ಹೋಗುತ್ತಿದ್ದಳು .

ಬದುಕು ಹೇಗೋ ಸಾಗುತ್ತಿತ್ತು ಆ ಚಂದನ್ ಎಂಬ ವ್ಯಕ್ತಿ ಇವಳ ಮಾಸ್ಟರ್ (ಸೂಪರ್ ವೈಸರ್ )ಆಗಿ ಬರುವವರೆಗೆ. ಗಾರ್ಮೆಂಟ್ಸ್ ಹೆಂಗಳೆಯರಲ್ಲಿ ಯಾರಾದರೂ ಗಮನ ಸೆಳೆಯುವಂತಿದ್ದರೆ ಅವರು ಅವನನ್ನು ಓಲೈಸಿಅಬೇಕಿತ್ತು. ಈ ಸಲ ಈಕೆ ಅವನ ಬಲಿ ಪಶುವಾಗಬೇಕಿತ್ತು ಇಲ್ಲವಾದರೆ ನಾಳೆಯಿಂದ ಅವಳು ಅಲ್ಲಿ ಇರುವಂತಿರಲಿಲ್ಲ .

ಇವತ್ತು ಏನಾದ್ರೂ ಮಾಡಿ ಸಿದ್ದನ ಅತ್ರ ಮಾತಾಡಿ ಏಳ್ಬಿಡಬೇಕು . ತನ್ನಲ್ಲಿ ಯೋಚಿಸಿಕೊಂಡಳು

ರಾತ್ರಿ ಬಂದಾಗ ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡು ಅತ್ತಳು . ನೀನೊಬ್ಬ ಸರಿಯಾಗಿದ್ರೆ ನಮ್ಮ ಬಾಳು ಇಂಗೆ ಇರ್ತಿರ್ಲಿಲ್ಲ ಅಂತ ಅತ್ತುಕೊಂಡಳು.

ಸಿದ್ದ ಕರಗಿ ಹೋದ

ಆಯ್ತು ಕಣೆ ಇನ್ನು ಈ ನನ್ನ ಮಗೀ ಮೇಲೆ ಆಣೆ ಇನ್ ಮ್ಯಾಕೆ ಕುಡಿಯಾಕಿಲ್ಲ. ಅವಂಗೆ ಒಂದು ಗತಿ ಕಾಣಿಸ್ತೀನಿ ನಾಳಿಕಿಂದ ನೀ ಏನ್ ಕೆಲ್ಸಕ್ಕೆ ಓಗ್ಬೇಡ ನಾನೇ ಓಯ್ತೀನಿ.

"ಎಲ್ಲಾ ಸರಿ ಆದ್ರೆ ನಾ ಮುಂಚಿದ್ನಲ್ಲ ಕೆಲ್ಸಕ್ಕೆ ಅವನತ್ರ ಕಾಸು ತಕ್ಕೊಂಡಿದೀನಿ ಅವನು ಕೆಲ್ಸ ಕೇಳೊಕೆ ಓದ್ರೆ ಕಾಸು ಕೇಳ್ತಾನೆ . ಅಲ್ಲಿ ಕೆಲ್ಸ ಬೋ ಆರಾಮಾಗಿರ್ತದೆ."

"ಏಟ್ ಕೊಡ್ವೇಕು ನೀನು ಅವಂಗೆ’ ಕೇಳಿದಳು

" ಒಂದಾರು ಸಾವ್ರ ಕೊಡ್ಬೇಕು"

"ಆಟೊಂದು ದುಡ್ದು ಯಾಕ್ ತಗೋಂಡಿದ್ದಿ ನೀನು"

"ಅದು -----------ಅದು --------- ಏ ಓಗ್ಲಿ ಬಿಡ್ಲೆ ನಾನೆ ಏನಾರ ಮಾಡಿ ಸಾಲ ತೀರ್ಸ್ಕೊಂತೀನಿ"

"ಬೇಡ ಬಿಡು ನೀ ಕೆಲ್ಸಕ್ಕೆ ಓದ್ರೆ ಏಟು ಬೇಕಾದ್ರೆ ಸಂಪಾದ್ನೆ ಮಾಡ್ಬೋದು. ನನ್ತಾವ ಒಂದೀಟು ದುಡ್ಡು ಇಟ್ಕಂಡಿದೀನಿ ಕೊಡ್ತೀನಿ ತಾಳು"

ಅಂದಿನ ಸಂವಾದ ಅವಳ ಹೊಸ ಬದುಕಿಗೆ ನಾಂದಿಯಾಯಿತು

ಮಾರನೆಯ ದಿನ ಅವಳು ಕೆಲಸಕ್ಕೆ ಹೋಗಲಿಲ್ಲ. ಸಿದ್ದ ಬೆಳಗ್ಗೆ ಬೇಗ ಎದ್ದು ಕೆಲಸಕ್ಕೆ ಹೋದ.

ಇವಳು ಮಗಳಿಗೆ ಸ್ನಾನ ಮಾಡಿಸಿ ಅಡಿಗೆ ಮಾಡಿ ಬಡಿಸಿ ಮನೆಯಲ್ಲಿ ನಲಿಯುತಲಿದ್ದಳು. ಸಂಬ್ರಮಿಸಿದಳು. ತನ್ನ ಕಷ್ಟ ಕೊನೆಯಾಗಿಸಿದ ದೇವರಿಗೆ ವಂದಿಸಿದಳು

ಸಂಜೆಯಾಯಿತು ಹೂವಾ ಮುಡಿದುಕೊಂಡು ಗಂಡನಿಗಾಗಿ ಕಾಯುತ್ತಿದ್ದಳು . ರಾತ್ರಿ ಹತ್ತಾದರೂ ಸಿದ್ದ ಕಾಣಲಿಲ್ಲ. ಮಗಳು ಮಲಗಿದ್ದಳು

ಹಾಗೆ ಮಂಪರು ಬಂದಂತಾಯಿತು.

"ಏಯ್ ಏಳೆ ಮ್ಯಾಕೆ ಹಾದ್ರ ಮಾಡಿದ್ದ ಕಾಸು ಕೊಟ್ಟು ನನ್ನ್ ಕೆಲ್ಸಕ್ಕೆ ಕಳ್ಸ್ತೀ ಏನ್ಲೆ? "ಸಿದ್ದನ ಗಡಸು ತುಂಬಿದ ದನಿಗೆ ಬೆಚ್ಚಿ ಎದ್ದಳು

ಸಿದ್ದ ಕಂಠ ಪೂರ್ತಿ ಕುಡಿದು ಜೋಲಿ ಹೊಡೆಯುತಿದ್ದ.

"ನಂಗೇನು ತಿಳ್ಯಾಕಿಲ್ವೇನೆ ನಿನ್ನ ಬುದ್ದಿ . ನಿಂತಾವ ಆಟೋಂದು ದುಡ್ಡು ಎಂಗೆ ಬತ್ತದೆ. ಯಾವ್ಯಾವನತ್ರ ಓಗಿದ್ಯೋ ಯಾರಿಗ್ ಗೊತ್ತು. "

ಅವಳು ಕಷ್ಟ ಪಟ್ಟು ಕೂಡಿಟ್ಟ ಹಣ ಅದು.

ಇನ್ನೂ ಬಯ್ಯುತ್ತಲೇ ಇದ್ದ . ಅಕ್ಕ ಪಕ್ಕದವರೆಲ್ಲಾ ನಿಂತು ತಮಾಷೆ ನೋಡುತ್ತಿದ್ದರು.

ರಾತ್ರಿ ಎಲ್ಲಾ ನಿದ್ರಿಸಲಿಲ್ಲ ಇವನು ಏಳ್ದ ಹಾಗೆ ಹಾದ್ರನಾದರೂ ಮಾಡಿದ್ರೆ ಏಟೊಂದು ದುಡ್ಡು ಸಂಪಾದ್ನೆ ಮಾಡ್ಬೋದಿತ್ತು . ನೀತಿ ನಿಯತ್ತಿಗೆ ಕಾಲವಿದಲ್ಲ ಎನಿಸಿತಾದರೂ ಮನಸ್ಸು ಬರಲಿಲ್ಲ

ಬೆಳಗಿನ ಜಾವ. ಸಿದ್ದ ರಾತ್ರಿಯ ನಶೆ ಇಂದ ಇನ್ನೊ ಎದ್ದಿರಲಿಲ್ಲ

ಇವಳು ಮಗಳನ್ನು ಕರೆದುಕೊಂಡು ಆ ಕೇರಿ ಬಿಟ್ಟು ಊರು ಬಿಟ್ಟು ಅಮ್ಮನ ಊರು ಸೇರಿಕೊಳ್ಳಲು ಮುನ್ನಡೆದಳು.




Monday, June 2, 2008

ಜವರಾಯನಿಗಿಲ್ಲ ಕರುಣೆ

ನಡುಬೀದಿಯಲ್ಲಿ ನಿಂತ ಅವಳು ಗಿರಾಕಿಗಾಗಿ ಅತ್ತಿತ್ತ ನೋಡುತ್ತಿದ್ದರೂ ಮನಸಿನ ಕಣ್ಣಿನ ಮುಂದೆ ಮಾತ್ರ ಹಸಿವು ಎಂದು ಅಳುತ್ತಿದ್ದ ತನ್ನ ಕಂದನ ಚಿತ್ರವೇ ಕುಣಿಯುತ್ತಿತು. ಯಾರದರೂ ಸಿಕ್ಕರೆ ಸಾಕು ಕಾಸು ತೆಗೆದುಕೊಂಡು ಮೊದಲು ಮಗುವಿಗೆ ಇಡ್ಲಿ ಕೊಡಿಸಿ ನಂತರ ಬರುವುದಾಗಿ ಹೇಳಬೇಕು
ನೆನ್ನೆವರೆಗೆ ಬಂದ ಹಣವನ್ನೆಲ್ಲಾ ಸಾರಾಯಿ ಅಂಗಡಿಗೆ ಸುರಿದಿದ್ದ ಅವಳನ್ನು ಈ ದಂಧೆ ಇಳಿಸಿದವ---ಬೇರಾರು ಅಲ್ಲ ಅವಳ ಗಂಡನೇ .ಆ ಊರಿನಿಂದ ಈ ಕಾಣದ ಊರಿಗೆ ಕರೆತಂದು ಒಂದು ಲಾಡ್ಜ್ನಲ್ಲಿ ಇಳಿಸಿ ಒಂದಷ್ಟು ಗಿರಾಕಿಗಳನ್ನು ಕರೆತಂದ . ನಂತರ ಅವರಿಂದ ಹಣ ಪಡೆದುಕೊಂಡವ ಪತ್ತೆಯೇ ಇಲ್ಲ ಬೆಳಗಿನಿಂದ.
ಮಗು ಹಸಿವೂ ಎಂದು ಭೋರ್‍ಗರೆದು ಅಳುತ್ತಿತು. ಬೆಳಗ್ಗೆ ಎದ್ದಾಗ ಬಿಸ್ಕೆಟ್ ಕೊಟ್ಟದ್ದಷ್ಟೆ .ಅವಳ ಹೊಟ್ಟೆಗೂ ಏನೂ ಇಲ್ಲ ಮಗುವಿಗೂ ಏನೂ ಇಲ್ಲ. ಏನಾದರಾಗಲಿ ಎಂದು ಮಗುವನ್ನು ಮಲಗಿಸಿ ಬಳಿಯಲ್ಲೇ ಇದ್ದ ಬಸ್ ಸ್ಟಾಪ್‌ಗ್ಗೆ ಬಂದು ನಿಂತಿದ್ದಳು.
ಅವಳನ್ನು ಗಂಡಸರು ನೋಡುತಿದ್ದರೇನೊ ನಿಜ ಆದರೆ ಬಳಿ ಬರುವ ಧೈರ್ಯ ಇರಲಿಲ್ಲವೆನ್ನಿಸುತವಳಿಗೆ
ಹಾಗಾಗಿ ಕಣ್ಣಲ್ಲೆ ಸನ್ನೆ ಮಾಡಿದಳು .
ಅವಳ ವಯಸು 30 ರ ಸಮೀಪ ಇರಬಹುದೇನೊ ಆದರೆ ಸಮಯ ಅದನ್ನು ಇನ್ನೂ ಹೆಚ್ಚಿಸಿತ್ತು. ಗುಳಿ ಬಿದ್ದ ಕಣ್ಣುಗಳಿಗೆ ಹಚ್ಚಿದ ಕಾಡಿಗೆ ಇಂದ ಇನ್ನೂ ಭಯಂಕರವಾಗಿ ಕಾಣುತಿದ್ದಳು.
ಹ್ಯಾಗೊ ಒಬ್ಬ ಬಂದ . ಚೌಕಾಸಿ ಮಾಡಿ 500 ರೂ ಗಳಿಂದ 200 ಕ್ಕೆ ಇಳಿಯಿತು ಅವಳ ರೇಟ್.
ಮಗುವಿಗೆ ಇಡ್ಲಿ ಕೊಡಿಸಿ ಇಲ್ಲೇ ಬರುವುದಾಗಿ ಹೇಳಿ ಬಳಿಯಲ್ಲಿನ ಅಂಗಡಿಯಿಂದ ಇಡ್ಲಿ , ಚಾಕ್ಲೆಟ್ ತೆಗೆದುಕೊಂಡು ಸಂಭ್ರಮದಿಂದ ಲಾಡ್ಜಿನೆಡ್ಗೆ ಧಾವಿಸುತ್ತಿದ್ದಂತೆ......................
ಅದ್ಲ್ಲಿದ್ದನೋ ಜವರಾಯ ಲಾರಿಯೊಂದರ ರೂಪದಲ್ಲಿ ಬಂದವನೇ ಅವಳ ಪ್ರಾಣ ಹೀರಿ ನಡೆದೇ ಬಿಟ್ಟ.
ಲಾರಿ ಹೋದ ನಂತರ ಅಲ್ಲಿದ್ದಿದ್ದು ಅವಳ ಜಜ್ಜಿ ಹೋದ ಶರೀರ ಹಾಗೂ ಚೆಲ್ಲಾಪಿಲ್ಲಿಯಾದ ಇಡ್ಲಿ , ಚಾಕ್ಲೆಟ್......................................................................


ಇತ್ತ ಮಗು ಅಮ್ಮ ಬರುತ್ತಾಳೆ ಎಂದು ಅಳುತ್ತಾ ಕಾಯುತ್ತಲೇ ಇತ್ತು................................................

Friday, May 9, 2008

ಅತ್ಯಾಚಾರ ಮತ್ತು ಕಾರಣಗಳು

ಇಂದು ಅಕಸ್ಮಾತ್ ಆಗಿ ಟೀನಾ ರವರ ಬ್ಲಾಗ್ಗೆ ಭೇಟಿ ನೀಡಿದೆ ಅಲ್ಲಿ ನಡೆಯುತಿದ್ದ ಕೆಲವು ಚರ್ಚೆಗಳು ಸ್ವಾರಸ್ಯ ಹಾಗು ಯೋಚಿಸಬೇಕಾದ ಗಂಭೀರ ವಿಚಾರಗಳೇ ಸರಿ.

ಹೆಣ್ಣಿನ ಮೇಲೆ ಅತ್ಯಾಚಾರ ಯಾಕೆ ನಡೆಯುತ್ತದೆ ಎಂಬುದನ್ನು ಮೊದಲು ವಿಶ್ಲೇಷಿಸಿದಾಗ ಈ ಕಾರಣಗಳು ನನಗೆ ಹೊಳೆದವು. ನನ್ನ ಜೀವನ ಯಾತ್ರೆಯಲ್ಲಿ ಕೆಲವು ಇಂತಹ ಸಂಗತಿಗಳೂ ನಡೆದಿವೆ. ಅದನ್ನೂ ಇಲ್ಲಿ ಬರೆದ್ದಿದ್ದೇನೆ
ಸಂಧರ್ಭ:
ಗಂಡಸರು ಅನುಕೂಲಸಿಂಧುಗಳು.
ಇಂದು ಕ್ಲೋಸ್ ಫ್ರೆಂಡ್ ಆಗಿರುವುವನೇ ನಾಳೆ ರೇಪಿಸ್ಟ್ ಆಗಬಹುದು.
ನಾನು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿನ ಲೈಬ್ರರಿಯಲ್ಲಿ ಶನಿವಾರ (ಅಂದು ರಜಾ) ಭೇಟಿ ಕೊಟ್ಟಿದ್ದೆ.
ಯಾರು ಇರಲಿಲ್ಲ ವಾದ್ದರಿಂದ ಆತನ ಬುದ್ದಿಗೇನಾಯಿತೊ ಮೇಲೆ ಬೀಳಲು ಹವಣಿಸಿದ.
ಇಷ್ಟು ದಿನ ಕ್ಲೋಸ್ ಆಗಿ ಮಾತಾಡುತ್ತಿದ್ದೆಯಲ್ಲ . ಇಂದು ಇದಕ್ಕೂ ಒಪ್ಪಿಕೋ ಎಂದ./ ಹ್ಯಾಗೊ ಅವನಿಂದ ತಪ್ಪಿಸಿಕೊಂಡು ಬಂದಾಗಲಷ್ಟೆ ನೆಮ್ಮದಿಯ ಉಸಿರು ಬಿಟ್ಟೆ. ಯಾರಿಗೂ ಹೇಳಲಿಲ್ಲ . ಹೇಳಿದರೆ ನೀನ್ಯಾಕೆ ರಜಾದಿನದಲ್ಲಿ ಹೋದೆ . ನಿನ್ನದೇ ತಪ್ಪು ಅಂತಾರೆ.

ಹೆಣ್ಣಿನ ಸ್ಥಿತಿ
ಅಕಸ್ಮಾತ್ ಹೆಣ್ಣು ಗಂಡಿಗಿಂತ ಆರ್ಥಿಕವಾಗಿಯೋ ಅಥವ ದೈಹಿಕವಾಗಿಯೊ ದುರ್ಬಲಳಾಗಿದ್ದರೆ ಅವಳು ಗಂಡಿಗೆ ಬಡಿಸಿಟ್ಟ ಎಲೆ ಎಂದುಕೊಳ್ಳುತ್ತಾನೆ . ಸಾಮಾನ್ಯವಾಗಿ ಹುಡುಗಿಯರು ತಮ್ಮ ಕೆಲಸದಲ್ಲಿ ಅಥವ ಕಾಲೇಜಿನಲ್ಲಿ ಇಂತಹ ಸಂಧರ್ಭ ಎದುರಿಸಬೇಕಾಗುತ್ತದೆ.
ಗಂಡಿನ ಸ್ಥಿತಿ
ಗಂಡು ಕೆಲವೊಮ್ಮೆ ಇಲ್ಲೀವರೆಗೆ ಹೆಣ್ಣನ್ನೂ ಕಾಣದಿದ್ದಾಗ(ಬ್ರಹ್ಮಚಾರಿಗಳಾಗಿದ್ದವರು) ಮತ್ತು ತಮ್ಮ ಕಾಮ ತೀವ್ರತೆಯನ್ನು ಹತೋಟಿಯಲ್ಲಿಟ್ಟುಕೊಳ್ಳದೇ ಇದ್ದಾಗ ಅತ್ಯಾಚಾರಕ್ಕೆ ದಾರಿ ಯಾಗಬಹುದು.
ಹೆಣ್ಣಿನ ನಡತೆ
ಯಾರೇನೆ ಅಂದರೂ ಹೆಣ್ಣು ಯಾರೊಡನೆಯಾದರೂ ನಗುತ್ತಾ ಮಾತನಾಡಿದರೆ ಅವಳು ’ಅದಕ್ಕೆ ಕೊಡುವ ಇಂಡೈರೆಕ್ಟ್ ಇನ್ವಿಟೇಶನ್ ಅಂತ ಅಂದುಕೊಳ್ಳುವ ಸಮಾಜ ಇನ್ನೂ ಬದಲಾಗುವುದಿಲ್ಲ. ಆಗುವುದೂ ಇಲ್ಲ.

ಒಮ್ಮೆ ಒಂದು ಸಂಸ್ಥೆಯ ಅಧಿಕಾರಿಯಾಗಿ ನಾನು ಒಬ್ಬ ವಿದ್ಯಾರ್ಥಿಯೊಡನೆ ರಸ್ತೆಯಲ್ಲಿ ಸಿಕ್ಕನೆಂದು ಮಾತನಾಡಿ ಸ್ವಲ್ಪ ದೂರ ಬಂದೊಡನೆ ಯಾರೋ " ಅವನ ಜೊತೇಲಿ ಮಾತ್ರ ಬರ್ತೀರ ನಮ್ಮ ಜೊತೆ ಬರಲ್ಲ್ವಾ " ಅಂತ ಕೆಟ್ಟಾದಾಗಿ ಕೇಳಿದಾಗ ಇನ್ನೊಮ್ಮೆ ಯಾರೊಡನೆಯೂ ರಸ್ತೆಯಲ್ಲಿ ಮಾತನಾಡುತ್ತಾ ನಿಲ್ಲಬಾರದು ಎನಿಸಿತು.
ಹೆಣ್ಣಿನ ಉಡುಪು
ಖಂಡಿತಾ ಇದು ಸತ್ಯ.
ಈಗಿನ ಫ್ಯಾಶನ್ ಕಡಿಮೆ ಬಟ್ಟೆ ಹಾಕುವುದು. ಅದು ನಿಜ . ನಾನೂ ಒಪ್ಪುತ್ತೇನೆ. ಅದು ಎಲ್ಲಿವರೆಗೆ?
ನಾವು ಸಮಾಜದಲ್ಲಿ ಬದುಕುತ್ತಿದ್ದಾಗ ಸಮಾಜದ ಕಟ್ಟುಪಾಡುಗಳು ಅತಿ ಮುಖ್ಯ. ಅದನ್ನು ಮೀರಿದವಳು, ’ಅಂತಹವಳು’ ಎಂದು ಬ್ರಾಂಡ್ ಆಗುವುದು ನಿಜ. ಅಂತಹವರು ಗಂಡನ್ನು ಪ್ರಚೋದಿಸುವುದೂ ನಿಜ
ನಾನು ಚಿಕ್ಕವಳಿದ್ದಾಗ (೧೫ ವರ್ಷದವಳು)ಒಂದು ನಗರವಾಗುತ್ತಿರುವ ಹಳ್ಳಿಯಲ್ಲಿ ಕೆಲ ಕಾಲ ಇದ್ದೆವು . ಕೇವಲ ಪ್ಯಾಂಟ್ ಶರ್ಟ್ ಧರಿಸಿ ನಾನು ಆ ಹಳ್ಳಿಯಲ್ಲಿ ಬರುತ್ತಿದ್ದಾಗ ಸಭ್ಯತೆಯ ಎಲ್ಲೆ ಮೀರಿ ಅಲ್ಲಿನ ಗಂಡಸರು ಮಾತನಾಡಿದ್ದು ನೆನಪಿದೆ.. ಅಂದಿನಿಂದ ಆ ಹಳ್ಳಿಯಲ್ಲಿ ಇರುವಷ್ಟು ದಿನ ನಾನು ಚೂಡಿದಾರ ಹಾಕಿಯೇ ಒಡಾಡುತ್ತಿದೆ. ಅಂತಹ ಪ್ರಸಂಗ ನನಗೆ ಎದುರಾಗಲೇ ಇಲ್ಲ.
ಪಾಶ್ಚಾತ್ಯ ರಾಷ್ತ್ರಗಳಲ್ಲಿ ಹೇಗೊ ಗೊತ್ತಿಲ್ಲ .
ಆದರೆ ನಮ್ಮ ಸಮಾಜದ ಲಕ್ಶ್ಮಣ ರೇಖೆ ಯನ್ನೂ ದಾಟದೇ ಇರುವ ವರೆಗೂ ಹೆಣ್ಣು ಎಂದಿಗೂ ಈ ಅತ್ಯಾಚಾರಕ್ಕೆ ಬಲಿಯಾಗುವುದು ಕಡಿಮೆ

ಹೆಣ್ಣು ಇದಕ್ಕೆ ಏನು ಮಾಡಬಹುದು
ನನ್ನ ಅನಿಸಿಕೆಗಳು
ಆದಷ್ಟು ರಾತ್ರಿ ಒಬ್ಬಳೆ ಒಡಾಡುವುದನ್ನು ಕಡಿಮೆ ಮಾಡಬೇಕು ಇಲ್ಲವಾದರೆ ಜನರಿರುವ ರಸ್ತೆಯಲ್ಲಿ ಓಡಾಡಬೇಕು ಇಲ್ಲವಾದರೆ ಯಾರಾದರೂ ಗೊತ್ತಿರುವವರು ಜೊತೆ ಇರಬೇಕು
ಟೀನಾರವರು ಹೇಳಿದಂತೆ ಆತ್ಮರಕ್ಶಣೆಯ ಕಲೆಯನ್ನು ರೂಡಿಸಿಕೊಳ್ಳಬೇಕು, ಜೊತೆಯಲ್ಲಿ ಪೆಪ್ಪರ್ ಸ್ಪ್ರೇ ಆಥವ ಆ ಥರಹದ ಇನ್ನೇನಾದರೂ ಇಟ್ಟುಕೊಳ್ಳಾಬೇಕು
ನಾನು ಯಾವುದೇ ಸಮಯ್ದಲ್ಲೂ ಆಟೊನಲ್ಲಿ ಅಥವ ಟ್ಯಾಕ್ಸಿಯಲ್ಲಿ ಬರುತ್ತಿದ್ದಾಗಲೆಲ್ಲಾ . ಆ ಡ್ರೈವರ್‌ನ ಪೋಲಿಸ್ ನಂಬರನ್ನು ನನಗೆ ತಿಳಿದವರಿಗೆ ಎಸ್. ಎಮ್ .ಎಸ್ ಮಾಡುತ್ತೇನೆ. ದಾರಿಯಲ್ಲಿ ಫೋನನ್ನಲ್ಲಿ ಮಾತಾಡುತ್ತಾ ನನಗೆ ತಿಳಿದವರು ಈ ರಸ್ತೆಯಲ್ಲಿ ಸಿಕ್ಕಿ ಹತ್ತುತ್ತಾರೆ ಎಂಬುದನ್ನು ಅವನಿಗೆ ಸೂಚ್ಯವಾಗಿ ಹೇಳುತ್ತೇನೆ. ನಂತರ ಅವನ ಜೊತೆ ಮಾತನಾಡಲಾರಂಭಿಸುತ್ತೇನೆ. ಅವನ ಜೊತೆ ಮಾತಾನಾಡುತ್ತಾ ಒಂದು ರೀತಿಯ ಅತ್ಮೀಯ ವಾತವರಣ ನಿರ್ಮಿಸುತ್ತೇನೆ ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಜಾರಿಕೆಯ ಮಾತಾಗಲಿ , ವೈಯುಕ್ತಿಕ ವಿಷಯ ವಾಗಲಿ ನುಸುಳದಂತೆ ಎಚ್ಚರ ವಹಿಸುತ್ತೇನೆ.
ತನ್ನ ಬಟ್ಟೆ ಹಾಗೂ ತನ್ನ ನಡುವಳಿಕೆಯ ಮೇಲೆ ಗಮನ(ಎಚ್ಚರ ) ವಿರಬೇಕು. ಯಾವುದೇ ಕಾರಣಕೂ ತನ್ನ ಉಡುಪಿನಿಂದ ಅಂಗಾಂಗ ಪ್ರದರ್ಶನವಾಗಬಾರದು (ಯಾವುದೇ ಉಡುಪು ಧರಿಸಿದರೂ). ಹಾಗೂ ಎಷ್ಟೆ ಮಾತನಾಡಿದರೂ ದೈಹಿಕ ಸ್ಪರ್ಶವನ್ನು ಕಡಿಮೆ ಮಾಡಬೇಕು. (ಹೆಂಗಸರು ತಮ್ಮ ಗೆಳತಿಯರಂತೆ ತಮ್ಮ ಗೆಳೆಯರ ಮೇಲೂ ಕೈ ಹಾಕಿ ನಡೆಯುವುದನ್ನು ನಾನು ನೋಡಿದ್ದೇನೆ).
ಸಣ್ಣ ಪುಟ್ಟ ಸಹಾಯ ಡ್ರಾಪ್ ಮಾಡು ಕಾಫಿ ಕೊಡಿಸು. ತೆಗೆದುಕೊಂಡು ಬಾ ಎಂಬ ತಾವೆ ಮಾಡಬಹುದಾದಂತಹ ಕೆಲಸಗಳಿಗೆ ಗಂಡಸರ ಸಹಾಯ ಪಡೆಯುವುದು ತಪ್ಪು

ಇದನ್ನೆಲ್ಲಾ ಮಾಡಿದರೆ ಅತ್ಯಾಚಾರ ಎನ್ನುವುದೇ ಇಲ್ಲವಾಗುತ್ತವೆ ಎಂಬುದು ಸುಳ್ಳು
ಮುಖ್ಯವಾಗಿ ಗಂಡಸರಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು. ಅದನ್ನು ಮೂಡಿಸುವ ಕೆಲಸ ಆಗಬೇಕು ಅದು ಹೆಂಗಸರಿಂದ (ನಮ್ಮಿಂದಲೇ) ಆಗುವ ಕೆಲಸ

ಗಮನಿಸಿ . ಇಲ್ಲಿ ಯಾವುದನ್ನು ಜೆನರಲೈಸ್ಡ್ ಆಗಿ ಹೇಳಿಲ್ಲ .

Friday, May 2, 2008

ಗುರಿ

ಗುರಿ
ಬಿಡದ ಛಲದ ನಂಬಿಕೆ
ಮನದ ಹಠದ ಕೂಗಿಗೆ
ಶರಣಾಗಿ ಬಂದೆ ನಾ ನಿನಗೆ

ದೂರದಿ ಕಂಡು
ನನ್ನ ಸನಿಹ ಕರೆದು
ನಡೆದಿಹೆ ನೀ ಮುಂದು

ಪ್ರೀತಿ ಬಿಟ್ಟು, ಸ್ನೇಹ ಬಿಟ್ಟು
ನಿನ್ನರಸಿ ಬಂದೆ
ನಾನೆಲ್ಲಾ ಬಿಟ್ಟು

ಹರೆಯದಾಟ ಬೇಡ ಎಂದೆ
ಬರಿಯ ಹಣ ಒಲ್ಲೆ ಎಂದೆ
ನಿನ್ನ ತಲುಪಲೆನ್ನ ಗಮನ ಒಂದೆ

ನೀ ಬದುಕಿನರ್ಥ ನನಗೆ
ನಿನ್ನ ಹುಡುಕಿ ಮನದಿ ಮಿಡುಕಿ
ಬಾಳು ವ್ಯರ್ಥ ವಾಗದೆನಗೆ

ನೀ ಸಿಗುವ ತನಕ ಸಾಯಲಾರೆ
ನಿನ ಹಿಡಿಯದೆ ಹೋಗಲಾರೆ
ನೀನಿರದ ಎಡೆಯ ಬಯಸಲಾರೆ

ಎಲ್ಲಿಯೋ ನೀನಿರುವೆ
ಇಲ್ಲಿಯೇ ನಾನಿರುವೆ
ನಮ್ಮಿಬ್ಬರ ಮಿಲನಕಾಗೆ ನಾ ಕಾದಿರುವೆ
---
----
----

ಓ ಗುರಿ

Thursday, May 1, 2008

ಕತೆಯಾಗದ ಹುಡುಗಿ

ಆಕೆ ಈಗಷ್ಟೆ ಅರಳಿದ ಸುಂದರ ಪುಷ್ಪ. ಮುಗ್ಧತೆಯೇ ಮೈವೆತ್ತಿದ ಹುಡುಗಿ. ಪ್ರೀತಿ ಪ್ರೇಮದ ಹಂಬಲಕ್ಕೆ ಬಿದ್ದವಳಲ್ಲ. ಯಾರ ಹೃದಯದ ಬಾಗಿಲನ್ನೂ ಬಡಿದವಳಲ್ಲ. ತನ್ನ ಎದೆಯ ಕದವ ತಟ್ಟಿದವರಿಗೆ ಕದ ತೆರೆದವಳಲ್ಲ. ಕಾಲೇಜಿಗೆ ಒಂದು ಥರದ ಮಾದರಿಯಾಗಿದ್ದಳು.
ಆಕೆ ಒಮ್ಮೆ ಅವನನ್ನ ನೋಡಿದಳು ಅವನು ಅಂದರೆ ಆ ಸಿನಿಮಾದ ಹೀರೊ. ಟಿವಿಯಲ್ಲಿ ಆ ಹೀರೊನ ಹಾಡು ನೋಡಿ ಅವನ ರೂಪಕ್ಕೆ ಮನ ಸೋತಳು. ಅವನ ಕಣ್ಣ ಭಾವಕ್ಕೆ , ನರ್ತಿಸುವ ಶೈಲಿಗೆ ಮಾರು ಹೋದಳು
ಚಿತ್ರ ನೋಡಿ ಬಂದ ಮೇಲಂತೂ ಅವನದೇ ’ಧ್ಯಾನ’ವಾಯಿತು . ಅವನು ಇನ್ನೂ ಬ್ಯಾಚುಲರ್ ಎಂಬುದನ್ನು ಕೇಳಿದ ಮೇಲೆ ತಾನೆ ಅವನ ’ಮೊನಾಲೀಸ ’ ಎಂದು ತೀರ್ಮಾನಿಸಿದಳು. ಎಲ್ಲಿ ನೋಡಿದರೂ ಅವನ ಹೆಸರನ್ನೇ ಗೀಚುತ್ತಿದ್ದಳು. ಕಷ್ಟ ಪಟ್ಟು ಅವನ ಆಡ್ರೆಸ್ ಹುಡುಕಿ ಅವನಿಗೊಂದು ಪ್ರೀತಿ ತುಂಬಿದ ಪತ್ರ ಹಾಗು ತನ್ನ ಭಾವಚಿತ್ರ ಕಳಿಸಿದಳು.
ಅವನೋ ಯಾರೋ’ಹುಡುಗಾಟಕ್ಕೆ ’ ಕಳಿಸಿದ ಪತ್ರವಿರಬೇಕು ಎಂದು ಮೊದಲು ಕಡೆಗಣಿಸಿದನಾದರೂ , ನಂತರ ಭಾವಚಿತ್ರಕ್ಕೆ ಮನಸೋತನು . ಅವಳ ಪ್ರೀತಿಯ ’ಮುಂಗಾರು ಮಳೆ"ಯಲ್ಲಿ ತೋಯ್ದು ಹೋದನು . ಅವಳಿಗೆ ಮರು ಓಲೆ ಕಳಿಸಿದ . "ಚೆಲುವಿನ ಚಿತ್ತಾರ"ವೆಲ್ಲಾ ತನ್ನ ಹೃದಯ ಚೋರನು ಕಳಿಸಿದ ಪತ್ರದಲ್ಲೆ ಇದೆ ಎಂದೆನಿಸಿತು. ಪ್ರೀತಿ ಆರಂಭವಾಯಿತು. ಅಥವ ಹಾಗೆಂದುಕೊಂಡಳು.
ಒಮ್ಮೆ ಅವನನ್ನು ಭೇಟಿ ಮಾಡುವ ಇಂಗಿತ ವ್ಯಕ್ತ ಪಡಿಸಿದಳು.. ಹೀರೊ ತಥಾಸ್ತು ಎಂದ.
ಇಬ್ಬರೂ ಭೇಟಿಯಾದರು. ತನ್ನ ಮನದಾಸೆಯನ್ನು ಅವನ ಮುಂದೆ ತೋಡಿಕೊಂಡಳು. ತಾನು ಮದುವೆ ಎನ್ನುವುದಾದರೆ ನಿನ್ನನ್ನೇ ಎಂದಳು. ಅದಕ್ಕೇನು ಪುರಾವೆ ಎಂದು ಕೇಳಿದ. ತನ್ನ ಚೆಲುವೆಲ್ಲಾ ನಿನ್ನದೆ ಎಂದು ತನ್ನನ್ನು ತಾನೆ ಅರ್ಪಿಸಿಕೊಂಡಳು. ಆತನೋ ಜಾಣ ಏನನ್ನೂ ಬಾಯಿ ಬಿಡದೆ ಏನನ್ನೂ ಕೇಳದೆ ಎಲ್ಲಾ ಪಡೆದುಕೊಂಡ. ಎಲ್ಲವನ್ನೂ ಸೂರೆಹೊಡೆದ.
ಚೆಲುವೆ ತನ್ನ ಬಾಳು ಪಾವನವಾಯ್ತು ಎಂದುಕೊಂಡಳು.
ಸರಿ ಮನೆಯವರನ್ನು ಒಪ್ಪಿಸಿ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಹೇಳಿ ಅವಳನ್ನು ಮರಳಿ ಕಳಿಸಿದ.
ಕೊಂಚ ದಿನದಲ್ಲೇ ಆತ ಪ್ರಸಿದ್ದ ನಾಯಕನಾಗಿ ಬದಲಾದ ಅವನಿಗಾಗಿ ಕೋಟಿ ಕೋಟಿ ಸುರಿಯಲು ನಿರ್ಮಾಪಕರು ಸಾಲು ನಿಂತರು. ಸಾಲು ಸಾಲಾಗಿ ಚಿತ್ರ ಬಿಡುಗಡೆಯಾಗತೊಡಗಿದವು. ಹುಡುಗಿಯ ಕೈಗೆ ಸಿಗಲೂ ಆತ ಬಿಡುವಾಗಲಿಲ್ಲ
ಕೆಲವು ದಿನದಲ್ಲೆ ಆತನ ಮದುವೆ ಸುದ್ದಿ ಪತ್ರಿಕೆಗಳಲ್ಲಿ ಬಂತು. ಹುಡುಗಿ ಗಾಬರಿಯಾದಳು. ಹೀರೋನ ಮನೆ ಮುಂದೆ ಹೋಗಿ ಅತ್ತುಕೊಂಡಳು. ನಿಂಥರ ಎಷ್ಟೊಂದು ಹುಡುಗೀರು ಬರ್ತಾರೆ ಗೊತ್ತ. ಒಬ್ಬ ದೊಡ್ಡ ಹೀರೋ ಅಂದ್ರೆ ಅವನ ಹೆಸರು ಕೆಡಿಸೋಕೆ ಜನ ಕಾಯ್ತಾ ಇರ್ತಾರೆ ಎಂದು ಅಲ್ಲಿದ್ದ ಜನ ಅವಳನ್ನ ಓಡಿಸಿದರು.
ಮನೆಗೆ ಬಂದವಳೇ ಆಳಲೂ ಶಕ್ತಿ ಇಲ್ಲದವಳಂತೆ ಕೂತಳು . ಇನ್ನೂ ಹದಿನೆಂಟು ತುಂಬದ ವಯಸ್ಸು. ಆತ ತನ್ನವನಾಗಲಿಲ್ಲ ಎಂಬ ಬೇಗುದಿ ಒಂದೆಡೆಯಾದರೆ, ತಾನು ಯಾರವಳೂ ಆಗಲಾಗದ ದಳ್ಳುರಿ ಸುಡಲಾರಂಭಿಸಿತು. ಮುಂದೆ...........
ಆ ಹೀರೋನ ಮದುವೆ ವಿಜ್ರಂಭಣೆಯಿಂದ ಜರುಗಿತು.
ಪತ್ರಿಕೆಗಳಲ್ಲಿ ಈ ಸುದ್ದಿಯ ಜೊತೆ ಕೆಳಗಡೆ ಇಂತಹ ಹೀರೊ ಮದುವೆಯಾಗುತ್ತಿದ್ದಾನೆಂದು ಸಹಿಸದ ಹುಡುಗಿಯೊಬ್ಬಳ ಆತ್ಮಹತ್ಯೆ ಎಂಬ ಬರಹ ಕಾಣಿಸಿತು.
ಆ ಹೀರೊ " ಸಿನಿ ನಾಯಕರೂ ನಿಮ್ಮ ಹಾಗೆ ಮನುಶ್ಯರು . ಅವರೇ ನಿಮ್ಮ ಹೀರೊಗಳಲ್ಲ. ದಯವಿಟ್ಟು ಇಂಟಹ ನಿರ್ಧಾರ ತೆಗೆದುಕೊಳ್ಳಬೇಡಿ " ಎಂದು ಹುಡುಗಿಯರಿಗೆ ಕಿವಿ ಮಾತು ಹೇಳಿದ.
ಜನ ಚಪ್ಪಾಳೆ ಹೊಡೆದರು.